ಯಕ್ಷಗಾನ ಸಂಘಟಕ ವಿ.ಆರ್.ಹೆಗಡೆ ನಿಧನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 18 , 2013
|
ನವ೦ಬರ್ 18 , 2013
|
ಯಕ್ಷಗಾನ ಸಂಘಟಕ ವಿ.ಆರ್.ಹೆಗಡೆ ನಿಧನ
ಬೆಂಗಳೂರು :
ಯಕ್ಷಗಾನ ಯೋಗಕ್ಷೇಮ ಅಭಿಯಾನದ ರೂವಾರಿ ವಿ.ಆರ್.ಹೆಗಡೆ ಹೆಗಡೆಮನೆ ಅವರು ಭಾನುವಾರ ಬೆಳಗ್ಗೆ ವಿಧಿವಶರಾದರು. ಯಕ್ಷಗಾನಕ್ಕೆ ರಾಷ್ಟ್ರೀಯ ಕಲೆಯ ಸ್ಥಾನಮಾನ ಸಿಗಬೇಕು, ಅರ್ಹ ಅಶಕ್ತ ಕಲಾವಿದರಿಗೆ ಮಾಸಾಶನ, ಗೌರವಧನ ದೊರೆಯಬೇಕೆಂದು ಹೋರಾಟ ನಡೆಸುತ್ತಾ ಬಂದಿದ್ದ ವಿಷ್ಣು ರಾಮಕೃಷ್ಣ ಹೆಗಡೆ ಹೆಗಡೆಮನೆ (60) ಅವರ ಅಕಾಲಿಕ ನಿಧನದಿಂದ ಯಕ್ಷಗಾನ ಲೋಕ, ಕಲಾವಿದರು, ಕಲಾಭಿಮಾನಿಗಳು ತಮ್ಮ ಕ್ಷೇತ್ರದ ಅತ್ಯಾಪ್ತರೊಬ್ಬರನ್ನು ಕಳೆದುಕೊಂಡಂತಾಗಿದೆ.
ಹೆಗಡೆ ಅವರು ಪತ್ನಿ, ಇಬ್ಬರು ಪುತ್ರಿಯರು, ಅಪಾರ ಪರಿವಾರ, ಕಲಾವಿದರು, ಅಭಿಮಾನಿಗಳನ್ನು ಅಗಲಿದ್ದಾರೆ. ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ ಆರಂಭಿಸುವ ಮೂಲಕ ವಿದ್ಯಾವಂತ ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆಯುವಲ್ಲಿ ಅವರದ್ದು ವಿಶೇಷ ಸಾಧನೆ. ನಿರಂತರ ಹೋರಾಟ ಮೂಲಕ ಯಕ್ಷಗಾನ ಅಕಾಡೆಮಿ ಪ್ರಾರಂಭಕ್ಕೆ ಕಾರಣರಾದ ಅವರು ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು.
ಅಧ್ಯಾಪಕರೂ ಆಗಿದ್ದರು: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕದ ರಾಮಕೃಷ್ಣ ಹೆಗಡೆ ಮತ್ತು ವೇದಾವತಿ ದಂಪತಿಗೆ 1953ರಲ್ಲಿ ಜನಿಸಿದ ಹೆಗಡೆ, ಹುಟ್ಟೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಶಿರಸಿಯ ಸಿದ್ದಾಪುರದಲ್ಲಿ ಕಾಲೇಜು ಶಿಕ್ಷಣ ಮುಗಿಸಿ, ಇಟಗಿಯ ಹೈಸ್ಕೂಲ್ನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಪ್ರೌಢಶಾಲೆಯಲ್ಲೇ ವಿದ್ಯಾರ್ಥಿ ನೇತಾರನಾಗಿ, ಕಾಲೇಜು ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿದ್ದರು.
ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಶ್ರದ್ಧೆ, ಭಕ್ತಿ ಹೊಂದಿದ್ದ ಅವರು, ರಾಮಚಂದ್ರಾಪುರ ಮಠದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅಲ್ಲದೆ ಬೆಂಗಳೂರಿನ ಕುಮಾರಸ್ವಾಮಿ ದೇವಸ್ಥಾನದ ಧರ್ಮದರ್ಶಿಯಾಗಿ ನೆನೆಗುದಿಗೆ ಬಿದ್ದಿದ್ದ ರಾಜಗೋಪುರ ಹಾಗೂ ದೇವಾಲಯದ ಹೆಬ್ಟಾಗಿಲುಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಇಷ್ಟೇ ಅಲ್ಲದೆ ಅವರು ಅಗ್ನಿ ಸೇವಾ ಟ್ರಸ್ಟ್ನ ಕಾರ್ಯಾಧ್ಯಕ್ಷರಾಗಿ, ಅಖೀಲ ಹವ್ಯಕ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹಲವಾರು ಸಂಘ- ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯ ಕ್ರಿಯೆಯನ್ನು ಭಾನುವಾರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಹಿರಿಯ ಕಲಾವಿದರು ಹಾಗೂ ಅಭಿಮಾನಿಗಳು ಹೆಗಡೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
|
|
|